ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಯಲ್ಲಿ ಸಾಹಿತ್ಯ ಕಮ್ಮಟ; ಸಾಹಿತ್ಯದಿಂದ ವ್ಯಕ್ತಿತ್ವದ ವಿಕಾಸ ಹಾಗೂ ಸ್ವಂತಿಕೆಯ ಪ್ರಕಾಶ: ಶಿವಕುಮಾರ್ ಸಾಯ

ಅಡ್ಯನಡ್ಕ: ಅಡ್ಯನಡ್ಕ ಜನತಾ ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ 'ಶನಿವಾರ ಸಂಭ್ರಮ' ಸರಣಿ ಕಾರ್ಯಕ್ರಮದ ಅಂಗವಾಗಿ ಜನವರಿ 28ರಂದು ಸಾಹಿತ್ಯ ರಚನಾ ಕಮ್ಮಟ ಜರುಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜನತಾ ಪ್ರೌಢಶಾಲೆಯ ಕನ್ನಡ ಅಧ್ಯಾಪಕ, ಕವಿ, ಸಾಹಿತಿ ಶ್ರೀ ಶಿವಕುಮಾರ್ ಸಾಯ ಅವರು ಮಕ್ಕಳಿಗೆ ಸಾಹಿತ್ಯ ಮತ್ತು ಕವನ ರಚನೆಯ ತರಬೇತಿ ಮತ್ತು ಮಾರ್ಗದರ್ಶನ ನೀಡಿದರು. ಅವರು ಮಾತನಾಡುತ್ತಾ, ಮಕ್ಕಳ ಕವನಗಳನ್ನು ಬರೆಯುವಾಗ ಪ್ರಾಸಬದ್ಧತೆ, ಲಯ, ಛಂದಸ್ಸಿನ ಬಳಕೆ ಇದ್ದಾಗ ಬರವಣಿಗೆಯ ಕ್ರಮ ಆಕರ್ಷಕವಾಗುತ್ತದೆ. ವ್ಯಕ್ತಿತ್ವದ ವಿಕಾಸ ಹಾಗೂ ಸ್ವಂತಿಕೆಯ ಪ್ರಕಾಶಕ್ಕೆ ಸಾಹಿತ್ಯ ಪೂರಕ. ಸಾಹಿತಿಯು ತನ್ನ ಪ್ರತಿಭೆಯನ್ನು ಬಳಸಿ ಪದಗಳ ಮೂಲಕ ದೈನಂದಿನ ಜೀವನದಲ್ಲಿ ಕಂಡುಬರುವ ಆಶ್ಚರ್ಯ, ಕುತೂಹಲವನ್ನು ಹೊರಹಾಕುತ್ತಾನೆ. ಕವನ - ಕತೆಗಳನ್ನು ರಚಿಸುವುದರಿಂದ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಬಹುದು ಎಂದು ಹೇಳಿದರು.
ಸ್ವಂತಿಕೆಯು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನ. ಸುಲಭವಾಗಿ ಅನುಭವಕ್ಕೆ ದಕ್ಕುವ ವಿಷಯಗಳನ್ನು ಸಾಹಿತ್ಯ ರಚನೆಗೆ ಆರಿಸುವುದು ಸೂಕ್ತ. ಬರೆಯುವ ರೀತಿ, ಶೈಲಿ, ವರ್ಣನೆ, ಶಬ್ದ - ಅರ್ಥಾಲಂಕಾರಗಳ ಬಳಕೆ ಇವುಗಳಿಂದ ಪ್ರಬುದ್ಧ ಮತ್ತು ಜನಪ್ರಿಯವಾಗುವಂತೆ ಬರೆಯಬಹುದು. ಓದು ಮತ್ತು ಬರಹ ಎರಡೂ ಜೊತೆಯಾಗಿ ಸಾಗಬೇಕು. ಬರೆಯುತ್ತಾ ಬರೆಯುತ್ತಾ ವ್ಯಾಕರಣಕ್ಕೆ ತೊಂದರೆಯಾಗದಂತೆ ತಿದ್ದಿಕೊಂಡು ಭಾಷಾ ಪ್ರಯೋಗದಲ್ಲಿ ಪಕ್ವತೆಯನ್ನು ಸಾಧಿಸಬಹುದು ಎಂದರು. ಮಕ್ಕಳಿಗೆ ಕವನಗಳನ್ನು ಉದಾಹರಣೆಯಾಗಿ ನೀಡಿ, ಸ್ವತಂತ್ರವಾಗಿ ಬರೆಯಲು ಪ್ರೇರಣೆ ನೀಡಿದರು. ಪುಸ್ತಕ ಪ್ರಕಟಣೆ, ಪತ್ರಿಕೆಗಳು, ಟಿವಿ, ರೇಡಿಯೋ, ಅಂತರ್ಜಾಲ ತಾಣಗಳ ಮೂಲಕವೂ ಸಾಕಷ್ಟು ಅವಕಾಶಗಳಿವೆ ಎಂದು ತಿಳಿಸಿದರು.
ಜನತಾ ಪದವಿಪೂರ್ವ ಕಾಲೇಜಿನ ಗಣಿತ ಉಪನ್ಯಾಸಕರಾದ ಶ್ರೀ ಗಣೇಶ್ ಕೆ. ಆರ್. ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಸಹಕರಿಸಿದರು. ಜನತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಪ್ರಶಾಂತ ಮುಳಿಯ ಅವರು ಸ್ವಾಗತಿಸಿ, ಪರಿಚಯಿಸಿದರು. ಜನತಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಮಾಧವ ನಾಯ್ಕ್ ಪುಸ್ತಕ ಸ್ಮರಣಿಕೆ ನೀಡಿ, ವಂದಿಸಿದರು. ಸಹಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ಎ. ಅವರು ಕಾರ್ಯಕ್ರಮ ಸಂಯೋಜಿಸಿದರು.

Comments

Popular posts from this blog

ಸುಪ್ತ ಮನಸ್ಸಿನ ಅಪರಿಮಿತ ಶಕ್ತಿ

ಆ ಒಂಭತ್ತು ಸಂಗತಿಗಳು.......

ನಗ್ನಸತ್ಯ (ಹನಿಗವನ)